ಬಾಗಲಕೋಟ: ಮನೆಯವರ ವಿರೋಧದ ನಡುವೆ ನಾಲ್ಕು ಎಕರೆ ಜಮೀನನ್ನು ಲಾವಣಿ ಪಡೆದ ಯುವ ರೈತ ಕಬ್ಬು ಬೆಳೆಯಲು ಆರಂಭಿಸಿ ಮೊದಲ ವರ್ಷದಲ್ಲಿ ನಷ್ಟ ಅನುಭವಿಸಿ, ಮತ್ತೆ ಎರಡನೇ ವರ್ಷದಲ್ಲಿಯೂ ನಷ್ಟವನ್ನು ಅನುಭವಿಸಿ ಕಂಗಾಲಾದ ಸಮಯದಲ್ಲಿ ಸ್ನೇಹಿತ ಮಾರ್ಗದರ್ಶನದಲ್ಲಿ ರಮೇಶ ಹೂಗಾರ ಅವರು ಹೂವು ಬೆಳೆದು ಯಶ ಸಾಧಿಸಿದ್ದಾರೆ. ಹೌದು..! ಮೂಲತ ಬಾಗಲಕೋಟ ಜಿಲ್ಲೆಯ ಗುಳಬಾಳ ಗ್ರಾಮದವರಾದ ಇವರು ಆರಂಭದಲ್ಲಿ ಗಲಾಟಿ, ಗುಲಾಬಿ, ಮಲ್ಲಿಗೆ ಹೀಗೆ ತರಹೇವಾರಿ ಹೂವುಗಳನ್ನ ಬೆಳೆಯಲು ಆರಂಭಿಸುತ್ತಾರೆ. ಬರಬರುತ್ತಲೆ ಆದಾಯ ಹೆಚ್ಚಿದಂತೆ ಸುಗಂಧರಾಜ ಮತ್ತು ಗಲಾಟಿ ಹೂವನ್ನ ನಾಟಿ ಮಾಡುತ್ತಾರೆ. ಹೂವಿನ ಸಸಿ ನಾಟಿ ಮಾಡಿದ ಮೂರು ತಿಂಗಳಲ್ಲಿ ಬಂಫರ ಬೆಳೆ ಬಂದಿದ್ದು ಪ್ರತಿದಿನ ಸ್ಥಳೀಯ ಮಾರುಕಟ್ಟೆಗೆ ಸಾಗಿಸಿ ದಿನಕ್ಕೆ ಮೂರರಿಂದ ಐದು ಸಾವಿರದ ವರೆಗೆ ಆದಾಯ ಪಡೆಯುತ್ತಿದ್ದಾರೆ.
ಮೂರು ತಿಂಗಳಲ್ಲಿ ಬಂಪರ್ ಬೆಳೆ: ಸೇವಂತಿಗೆ ಹೂವನ್ನ ಹೋಲುವ ಈ ಗಲಾಟೆ ಹೂವು ನಾಟಿ ಮಾಡಿದ ಮೂರು ತಿಂಗಳಿಗೆ ಗಿಡದಲ್ಲಿ ಹೂವು ಆರಂಭಗೊಳ್ಳುತ್ತವೆ, ಅಲ್ಲದೇ ಸುಗಂಧರಾಜ ಗೆಡ್ಡೆ ತಂದು ನಾಟಿ ಮಾಡಿದ ಮೂರು ತಿಂಗಳಲ್ಲಿ ಹೂವಿನ ಗರಿ ಮೂಡುತ್ತದೆ. ಸದ್ಯ ಈ ಗಲಾಟಿ ಹೂವು ಹಳದಿ, ಕೆಂಪು, ಗುಲಾಬಿ ಬಣ್ಣವನ್ನ ಬಿಟ್ಟಿದ್ದು ತೋಟದಲ್ಲಿ ಅರಳಿ ನಿಂತಿವೆ. ಇನ್ನೊಂದೆಡೆ ಸುಗಂಧರಾಜ ಹೂವು ಸಹ ಅರಳುತ್ತಿವೆ. ಬೆಳಗ್ಗೆ ಐದು ಗಂಟೆಗೆ ಹೂವು ಕಟಾವು ಮಾಡಿ ಮಾರಾಟಮಾಡುತ್ತಾರೆ. ನಿತ್ಯ ಸಾಕಷ್ಟು ಲಾಭ ದೊರೆಯುತ್ತಿದ್ದು ಈ ಭಾಗದಲ್ಲಿಯೇ ಇವರು ಮಾದರಿಯ ರೈತರಾಗಿದ್ದಾರೆ. ಒಟ್ಟಿನಲ್ಲಿ ವಿವಿಧ ಬೆಳೆ ಬೆಳೆದು ನಷ್ಟ ಅನುಭವಿಸಿದ ಈ ರೈತನಿಗೆ ಪುಷ್ಪ ಕೃಷಿ ಕೈಹಿಡಿದಿದ್ದು, ವಾರ್ಷಿಕ ಲಕ್ಷಾಂತರ ಹಣ ಗಳಿಸುವತ್ತ ಇವರ ಬದುಕು ಸಾಗಿದೆ.