ವಿಜಯಪುರ: ವಿಜಯಪುರ ಶಹರದ ಬಸ್ ನಿಲ್ದಾಣದ ಎದುರು ಶಿಕ್ಷಕಿಯೊಬ್ಬರು ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ಹಣ ಇದ್ದ ಬ್ಯಾಗ್ ನ್ನು ಮಹಿಳೆಯ ಸಂಬಂಧಿಕರಿಗೆ ಮರಳಿಸುವ ಮೂಲಕ ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾರೆ. ಗದಗ ಜಿಲ್ಲೆಯ ಹೈಸ್ಕೂಲ್ ವೊಂದರಲ್ಲಿ ಶಿಕ್ಷಕಿಯಾದ ನೌಶಾದ್ ಬೇಗಂ ಶೇಖ್ ಎಂಬುವರು ರಂಜಾನ್ ಹಬ್ಬದ ಹಿನ್ನಲೆಯಲ್ಲಿ ತಮ್ಮ ಊರಾದ ಸಿಂದಗಿ ಬಳಿಯ ಕೋರವಾರಕ್ಕೆ ಪ್ರಯಾಣ ಬೆಳೆಸಿದ್ದರು. ಸಂಜೆ ನವಲಗುಂದ ಬಸ್ ನಿಲ್ದಾಣದಿಂದ ಸರಕಾರಿ ಬಸ್ ಮೂಲಕ ವಿಜಯಪುರ ನಿಲ್ದಾಣಕ್ಕೆ ಬಂದಿಳಿದಿದ್ದರು. ಆಗ ಬಸ್ ನಿಲ್ದಾಣದ ಎದುರು ತಮ್ಮ ಸಂಬಂಧಿಕರು ತಂದಿದ್ದ ಕಾರಿನಲ್ಲಿ ಹತ್ತುವಾಗ ತಾವು ತಂದಿದ್ದ ನಾಲ್ಕು ಬ್ಯಾಗ್ ಪೈಕಿ ಆರು ತೊಲೆ ಚಿನ್ನಾಭರಣ ಹಾಗೂ 5 ಸಾವಿರ ನಗದು ಇದ್ದ ಬ್ಯಾಗನ್ನು ಅಲ್ಲಿಯೇ ಮರೆತು ಹೋಗಿದ್ದರು. ನಂತರ ಕೋರವಾರಕ್ಕೆ ಹೋಗಿ ನೋಡಿದಾಗ ಬ್ಯಾಗ್ ಮರೆತಿರುವ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಆಗ ತಕ್ಷಣವೇ ವಿಜಯಪುರದ ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ, ನಿಲ್ದಾಣದ ಬಳಿ ಹೋಗಿ ಬ್ಯಾಗ್ ಹುಡುಕಾಡುವಂತೆ ಹೇಳಿದ್ದಾರೆ. ಆಗ ಸ್ಥಳಕ್ಕೆ ಹೋಗಿ ಬ್ಯಾಗ್ ಹುಡುಕಾಟದಲ್ಲಿ ತೊಡಗಿದ್ದ ನೌಶಾದ್ ಬೇಗಂ ಅವರ ಸಂಬಂಧಿಕರಿಗೆ ಅಲ್ಲಿನ ಆಟೋ ಚಾಲಕರಾದ ಅಲ್ಲಾಭಕ್ಷ ಶೇಖ್, ಶಬ್ಬೀರ್ ಕಲಾದಗಿ ಹಾಗೂ ಶಿವಾಜಿ ಪವಾರ ಎಂಬುವರು ಮಹಿಳೆ ಬಿಟ್ಟು ಹೋಗಿದ್ದ ಬ್ಯಾಗನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಬ್ಯಾಗ್ ಮರಳಿಸಿದ ಆಟೋ ಚಾಲಕರಿಗೆ ಬಹುಮಾನವಾಗಿ ಹಣ ನೀಡಲು ಹೋದರು ಅವರು ಸ್ವೀಕರಿಸಲಿಲ್ಲ ಎಂದು ಶಿಕ್ಷಕಿ ನೌಶಾದ್ ಬೇಗಂ ಮಾಹಿತಿ ಹಂಚಿಕೊಂಡಿದ್ದಾರೆ.